ಅಂಕೋಲಾ: ಕೇಣಿ ಬಂದರು ನಿರ್ಮಾಣ ಸಂಬಂಧ ಹೋರಾಟ ದಿಕ್ಕು ತಪ್ಪಿಸಲು ಒಡ್ಡುವ ಆಮಿಷಗಳಿಗೆ ಒಳಗಾಗದೆ ಹೋರಾಟ ಮುಂದುವರಿಸಿ. ಆಗಸ್ಟ್ ತಿಂಗಳಲ್ಲಿ ನಡೆಯುವ ಸಾರ್ವಜನಿಕ ಅಹವಾಲು ಸಭೆಯನ್ನು ಮುಂದೂಡುವಂತೆ ಮಾಡುತ್ತೇನೆ. ಬಂದರು ನಿರ್ಮಾಣ ಕೈ ಬಿಡುವಂತೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಕಾನೂನು ಪರಿಣಿತರೊಂದಿಗೆ ಚರ್ಚಿಸಿ ಕಾನೂನು ಕ್ರಮಕ್ಕೆ ಮುಂದಾಗೋಣ. ಮೀನುಗಾರ ನಿಯೋಗ ಕೇಂದ್ರ ಸರ್ಕಾರದ ಮಂತ್ರಿಗಳು ಮತ್ತು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ನೇತೃತ್ವ ವಹಿಸುವೆ ಎಂದು ಕೆಪಿಸಿಸಿ ಮೀನುಗಾರ ವಿಭಾಗದ ಅಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ರಾಷ್ಟ್ರೀಯ ಮೀನುಗಾರರ ಸಂಘ ನವದೆಹಲಿ ಕರ್ನಾಟಕ ಮಂಜುನಾಥ ಸುಣಗಾರ ಭರವಸೆ ನೀಡಿದರು.
ಬುಧವಾರ ಸಂಜೆ ತಾಲ್ಲೂಕಿನ ಕೇಣಿ ಕಡಲ ತೀರದಲ್ಲಿ ಸ್ಥಳೀಯ ಮೀನುಗಾರರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಆಲಿಸಿದ ನಂತರ ಅವರು ಮಾತನಾಡಿದರು. ಇಲ್ಲಿನ ಮೀನುಗಾರರು ವೃತ್ತಿಪರ ಮೀನುಗಾರರಲ್ಲದೆ ಸಾಂಪ್ರದಾಯಿಕ ಮೀನುಗಾರರು. ಸಾಂಪ್ರದಾಯಿಕ ಮೀನುಗಾರಿಕೆಯನ್ನು ಹಾಳು ಮಾಡಿದರೆ ಮೀನುಗಾರರು ಏನು ಮಾಡಬೇಕು? ಹಾಗಾಗಿ ಇಲ್ಲಿನ ಬಂದರು ನಿರ್ಮಾಣ ವಿರೋಧಿಸಿ ಹೋರಾಟ ನಡೆಸಿ ಬೇಡಿಕೆ ಇಡುತ್ತಿರುವುದು ತಪ್ಪಲ್ಲ. ಮೀನುಗಾರರು ತಮ್ಮ ಸಮಸ್ಯೆಗಳನ್ನು ಕುರಿತು ಪಟ್ಟಿಮಾಡಿ ಇತರರ ನೆರವಿನೊಂದಿಗೆ ಬೃಹತ್ ಪ್ರಮಾಣದಲ್ಲಿ ಪತ್ರಗಳನ್ನು ಸಂಬಂಧಿಸಿದವರಿಗೆ ರವಾನಿಸಿ ಎಂದು ಹೋರಾಟಕ್ಕೆ ಬೆಂಬಲ ನೀಡಿದರು.
ಕೇಣಿ ಬಂದರು ವಿರೋಧಿ ಹೋರಾಟಗಾರರ ಪ್ರಮುಖ ಸಂಜೀವ ಬಲೆಗಾರ, ಬಂದರು ನಿರ್ಮಾಣದಿಂದ ಏನೇನು ದುಷ್ಪರಿಣಾಮಗಳು ಆಗಬಹುದು ಎನ್ನುವುದನ್ನು ಬೇಲೇಕೇರಿ ಅದಿರು ವ್ಯವಹಾರದಲ್ಲಿ ನೋಡಿದ್ದೇವೆ. ಈಗಾಗಲೇ ಹಲವು ಕಡೆಗಳಲ್ಲಿ ಬಂದರು ನಿರ್ಮಾಣದಿಂದ ದೀರ್ಘಾವಧಿಯಲ್ಲಿ ದುಷ್ಪರಿಣಾಮ ಬೀರಿದೆ. ಮೂಲಗಳ ಪ್ರಕಾರ 26 ಅದಿರು ಸಂಬಂಧಿ ವ್ಯವಹಾರ ನಡೆಯುವುದರಿಂದ ಕಡಲ ಜೀವಿಗಳ ಪ್ರಭೇದದ ಹಾನಿಯೂ ಆಗಬಹುದು. ಸ್ಥಳೀಯರು ರೋಗಗ್ರಸ್ತರಾಗಬಹುದು. ಉತ್ತರ ಭಾರತಕ್ಕೆ ಅನುಕೂಲ ಮಾಡಿಕೊಡಲು ಮಾಡಿದ ಇಂತಹ ಯೋಜನೆಗಳಿಂದ ಮೀನುಗಾರರು ಭಿಕ್ಷೆ ಎತ್ತುವ ಪ್ರಸಂಗ ನಿರ್ಮಾಣವಾಗಬಹುದು ಹೊರತು ಮೀನುಗಾರರ ಉದ್ಧಾರ ಅಲ್ಲ ಎಂದು ಸಮಸ್ಯೆ ಹೇಳಿಕೊಂಡರು.
ಬಂದರು ನಿರ್ಮಾಣದ ವಿರುದ್ಧ ಮುಂದೆ ಉಗ್ರ ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. ಮೀನುಗಾರರ ಹೋರಾಟದ ನಡುವೆ ಭೂಮಿ ಕಳೆದುಕೊಳ್ಳಲಿರುವ ಗ್ರಾಮಸ್ಥರು ಮತ್ತೊಂದು ರೀತಿಯಲ್ಲಿ ಹೋರಾಟಕ್ಕೆ ಇಳಿದಿದ್ದು ನಿರ್ಮಾಣ ಕಂಪನಿಗೆ ತಲೆನೋವು ಹೆಚ್ಚಾಗಿದೆ.