ಅಂಕೋಲಾ: ಕಳ್ಳತನ ಉದ್ದೇಶದಿಂದಲೋ ಅಥವಾ ಇನ್ಯಾವುದೋ ಕಾರಣಕ್ಕೆ ದೇವಸ್ಥಾನದ ಒಳಗೆ ಅಕ್ರಮ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದವನನ್ನು ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ ಘಟನೆ ತಾಲೂಕಿನ ಪೂಜಗೇರಿಯಲ್ಲಿ ನಡೆದಿದೆ.
ವ್ಯಕ್ತಿ ಒರಿಸ್ಸಾ ಮೂಲದವನು ಎಂದು ಹೇಳಿಕೊಂಡಿದ್ದು ಮೀನುಗಾರಿಕೆಗಾಗಿ ಇಲ್ಲಿಗೆ ಬಂದಿದ್ದ ಎಂದು ತಿಳಿದು ಬಂದಿದೆ. ಇಲ್ಲಿನ ಪೂಜಗೇರಿಯ ರಣಮಾಸ್ತಿ ದೇವಾಲಯದ ಒಳಗೆ ಅಕ್ರಮ ಪ್ರವೇಶಕ್ಕೆ ಪ್ರಯತ್ನ ನಡೆಸುತ್ತಿದ್ದು ಮೊದಲಿಗೆ ಸ್ಕ್ರೂ ಡ್ರೈವರ್ ಮೂಲಕ ಬಾಗಿಲ ಬೀಗ ಮುರಿಯಲು ವಿಫಲಯತ್ನ ನಡೆಸಿದ್ದಾನೆ. ನಂತರ ದೇವಾಲಯದ ಹಿಂಭಾಗದಿಂದ ಸಿಮೆಂಟ್ ಕಿಡಕಿಯನ್ನು ಮುರಿಯಲು ಪ್ರಯತ್ನ ನಡೆಸಿದ ವೇಳೆಯಲ್ಲಿ ಸ್ಥಳೀಯರು ಗಮನಿಸಿ ವಿಚಾರಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಯ ನಂತರ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.