ಅಂಕೋಲಾ: ತಾಲ್ಲೂಕಿನ ಬಾಸಗೋಡದ ಯುವತಿ ಪ್ರಥ್ವಿ ದೇವಾನಂದ ಗಾಂವಕರ ಭಾರತೀಯ ಸೈನ್ಯದ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಬಾಸಗೋಡದ ಸ್ವಾತಂತ್ರ್ಯ ಯೋಧ ಬೊಮ್ಮಯ್ಯ ಗಾಂವಕರ ಅವರ ಮೊಮ್ಮಗಳಾದ ಪ್ರಥ್ವಿ ಇಂಜಿನಿಯರಿಂಗ್ ಪದವೀಧರರಾಗಿದ್ದು ತಾಂತ್ರಿಕ ವಿಭಾಗದಿಂದ ಆರ್ಮಿ ಆಫೀಸರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇಲ್ಲಿನ ಪ್ರತಿಷ್ಠಿತ ಹಿಮಾಲಯ ಪದವಿ ಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿಯಾಗಿ ನಂತರ ಬೆಂಗಳೂರಿನ ನ್ಯೂ ಹಾರಿಜಾನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಪದವಿ ಜೊತೆಯಲ್ಲಿ ಎನ್.ಸಿ.ಸಿ ತರಬೇತಿಯನ್ನು ಪ್ರಥ್ವಿ ಪೂರ್ಣಗೊಳಿಸಿದ್ದು ಇಲ್ಲಿನ ಗಾಂವಕರ ಮೆಮೋರಿಯಲ್ ಫೌಂಡೇಶನ್ ಸಹ ಕಾರ್ಯದರ್ಶಿ ಆಗಿರುವ ಅವರು ಯಕ್ಷಗಾನ ಕಲಾವಿದೆ. ದೇಶದ ಸ್ವತಂತ್ರ ಹೋರಾಟದಲ್ಲಿ ಗಮನಾರ್ಹ ಪಾತ್ರ ವಹಿಸಿದ್ದ ಬಾಸಗೋಡದ ಯುವತಿಯೊಬ್ಬರು ದೇಶದ ಸೈನ್ಯಕ್ಕೆ ಸೇವೆ ಸಲ್ಲಿಸುವ ಆಫೀಸರ್ ಹುದ್ದೆಗೆ ಆಯ್ಕೆಯಾಗಿದ್ದು ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಹಲವರು ಯುವತಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.