ಅಂಕೋಲಾ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಾಳುವನ್ನು ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ನೆರವಾಗುವ ಮೂಲಕ ಸಚಿವ ಯು.ಟಿ ಖಾದರ್ ಮಾನವೀಯ ಮೆರೆದಿದ್ದಾರೆ. ಜಿಲ್ಲೆಗೆ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ ಸಚಿವರು ಕಾರವಾರದಿಂದ ಉಡುಪಿ ಕಡೆಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸುತ್ತಿದ್ದು ಅವರಿಗೆ ಬೆಂಗಾವಲಾಗಿದ್ದ ಪೊಲೀಸ್ ವಾಹನಕ್ಕೆ ಇಲ್ಲಿನ ಅಲಗೇರಿಯ ಸಂದೀಪ ನಾಯಕ ಅವರು ಚಲಾಯಿಸುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸಂದೀಪ ನಾಯಕ ಗಾಯಗೊಂಡಿದ್ದು ಘಟನೆ ನಡೆದ ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿದ ಸಚಿವ ಯು.ಟಿ. ಖಾದರ್ ಆತನನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.