ಅಂಕೋಲಾ: ಉಸ್ತುವಾರಿ ಸಚಿವರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಸಚಿವ ಲಕ್ಷ್ಮಣ ಸವದಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ತಾಲ್ಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಗುರುವಾರ 3ಗಂಟೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದ್ದು ಯಾವುದೇ ಮಂತ್ರಿಗಳು ಇಲ್ಲವೇ ಗಣ್ಯರು ಬಂದು ಕೇವಲ ಗುಡ್ಡ ಕುಸಿತ ಸ್ಥಳಕ್ಕೆ ಮಾತ್ರ ಯಾಕೆ ಭೇಟಿ ನೀಡುತ್ತಾರೆ? ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂದು ಅಪಸ್ವರಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಎರಡು ವರ್ಷಗಳು ಕಳೆದಿವೆ. ಅಲ್ಲಿನ ಸುರಕ್ಷಿತ ಗೋಡೆ ನಿರ್ಮಾಣ ಪ್ರಗತಿಯಲ್ಲಿದ್ದು ಗಂಗಾವಳಿ ನದಿಯಲ್ಲಿ ಬಿದ್ದಿರುವ ಮಣ್ಣಿನ ತೆರುವು ಕಾರ್ಯಾಚರಣೆ ಮುಕ್ತಾಯ ಹಂತದಲ್ಲಿದೆ. ಹಾಗಿದ್ದೂ ಆ ದುರಂತದಲ್ಲಿ ಸಂತ್ರಸ್ತರಾದ ಮನೆಗಳಿಗೆ ಇಲ್ಲವೇ, ನೆರೆಹಾವಳಿ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ಇತರೆ ಪ್ರದೇಶಗಳಿಗೆ ಭೇಟಿ ನೀಡುವುದು ಬಿಟ್ಟು ಹೊರ ಜಿಲ್ಲೆಯಿಂದ ಬರುವ ರಾಜಕಾರಣಿಗಳು, ಮಂತ್ರಿಗಳು ಹಾಗೂ ಇತರೆ ಜನ ಪ್ರತಿನಿಧಿಗಳು ಕೇವಲ ಗುಡ್ಡ ಕುಸಿತ ಸ್ಥಳದ ಪರಿಶೀಲನೆ ಮಾಡುವುದು ಯಾಕೆ? ಇದು ಕೇವಲ ಪ್ರಚಾರದ ತಂತ್ರವೇ ಹೊರತು ಜನರ ಸಮಸ್ಯೆಗಳನ್ನು ಪರಿಹರಿಸುವ ಆಲೋಚನೆ ಅಲ್ಲವೆಂದು ಅಪಸ್ವರಗಳು ಕೇಳಿಬಂದಿದೆ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಾರ್ಲ್ಯಾಂಡ್ ಸಮಸ್ಯೆ, ಹಾರವಾಡ ಒಳಗೊಂಡು ಕಡಲ್ಕೊರೆತ ಸಮಸ್ಯೆ, ವಸತಿ ನಿಲಯಗಳಲ್ಲಿ ವಾರ್ಡನ್ ಮತ್ತಿತರ ಸಿಬ್ಬಂದಿಗಳ ಕೊರತೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಐಆರ್ಬಿ ನಿರ್ಮಿತ ಸಮಸ್ಯೆ, ಅರಣ್ಯ ಅತಿಕ್ರಮಣದಾರರ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳಿದ್ದು ಕೇವಲ ಗುಡ್ಡ ಕುಸಿತ ಸ್ಥಳವನ್ನು ಎರಡು ವರ್ಷದಿಂದ ವೀಕ್ಷಣೆ ಮಾಡಿ ಪ್ರಯೋಜನವೇನು? ಬದಲಾಗಿ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸುವತ್ತ ಗಮನಹರಿಸಲಿ ಎನ್ನುವ ಸಲಹೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.