ಅಂಕೋಲಾ: ಒಂದು ವರ್ಷದಿಂದ ನಿರಂತರವಾಗಿ ಕೇಣೆ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಿದ್ದು ಮುಂದುವರೆದ ಭಾಗವಾಗಿ ಬುಧವಾರದಿಂದ ಅಂಕೋಲಾ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಉಳಿಸಿ, ಬೃಹತ್ ಯೋಜನೆಗಳಿಗೆ ಬಲಿಯಾಗುವುದನ್ನು ತಪ್ಪಿಸಿ ಎನ್ನುವ ಧ್ಯೇಯದೊಂದಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ದೊರೆತಿದೆ. ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದ ಗಾಂಧಿ ಮೈದಾನದಲ್ಲಿ ನೂರಾರು ಮಹಿಳೆಯರು ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಜನರು ಜಮಾವನೆಗೊಂಡು ಶಾಂತಿಯುತ ಹೋರಾಟಕ್ಕೆ ಮುಂದಾಗಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಭವನದಲ್ಲಿ ಅಗಸ್ಟ್ 22ರಂದು ಸಾರ್ವಜನಿಕ ಆಹವಾಲು ಸಭೆ ನಡೆದಿದ್ದು ಜಿಲ್ಲೆಯಲ್ಲಿ ದಾಖಲೆ ಎನ್ನುವಂತೆ ಸಾವಿರಾರು ಸಾರ್ವಜನಿಕರು ಯೋಜನೆಯನ್ನು ವಿರೋಧಿಸಿದ್ದರು. ಅಲ್ಲದೇ ಒಂದು ವರ್ಷದಿಂದ ನಿರಂತರ ಹೋರಾಟಗಳನ್ನು ಮಾಡುತ್ತಾ ಕೇಂದ್ರ ಸರ್ಕಾರದವರೆಗೆ ಯೋಜನೆ ಕೈ ಬಿಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರ ಈ ಕುರಿತು ಚಿಂತಿಸಿ ಸಾರ್ವಜನಿಕರ ಅಭ್ಯುದಯಕ್ಕೆ ತೀರ್ಮಾನ ಕೈಗೊಳ್ಳದಿರುವ ಕುರಿತು ಹಾಗೂ ವಾಣಿಜ್ಯ ಬಂದರು ನಿರ್ಮಾಣ ಕೈಬಿಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ಹಿನ್ನೆಲೆ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದೇವೆ ಎನ್ನುವುದು ಹೋರಾಟ ಸಮಿತಿಯ ಪ್ರಮುಖರ ಅಭಿಪ್ರಾಯವಾಗಿದೆ. ಬುಧವಾರ ಮುಂಜಾನೆಯಿಂದಲೇ ಬೃಹತ್ ಪ್ರಮಾಣದ ಸಾರ್ವಜನಿಕರು ಸೇರುತ್ತಿರುವುದನ್ನು ಕಂಡು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಸ್ವತಂತ್ರ ಸಂಗ್ರಾಮ ಭವನದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈ ವೃತ್ತದ ಬಳಿ ಧರಣಿ ಮುಂದುವರೆಯಲಿದೆ.