ಶಿರಸಿ: ದಕ್ಷಿಣ ಭಾರತದ ಸುಪ್ರಸಿದ್ಧ ಶ್ರೀಮಾರಿಕಾಂಬಾ ಜಾತ್ರೆಗೆ ಇಂದು ಭಕ್ತಿಭಾವಪೂರ್ಣವಾಗಿ ಚಾಲನೆ ದೊರಕಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯುತ್ತಿರುವ ಈ ಮಹಾ ಜಾತ್ರೆಯ ಅಂಗವಾಗಿ ಇಂದು ಮುಂಜಾನೆ 7.27 ಗಂಟೆಗೆ ಶ್ರೀ ಮಾರಿಕಾಂಬಾ ದೇವಿ ರಥಾರೂಢಳಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದಳು.
ನಿನ್ನೆ ರಾತ್ರಿಯಿಂದಲೇ ಜಾತ್ರೆಯ ವಿಧಿವಿಧಾನಗಳು ಆರಂಭಗೊಂಡಿದ್ದು, ರಾತ್ರಿ ಭಕ್ತಿಭಾವದಿಂದ ಶ್ರೀ ದೇವಿಯ ಕಲ್ಯಾಣೋತ್ಸವ ನೆರವೇರಿತು. ಭಜನೆ, ಮಂಗಳವಾದ್ಯಗಳ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಇಂದು ಬೆಳಗ್ಗೆ ಭವ್ಯ ಮೆರವಣಿಗೆಯೊಂದಿಗೆ ದೇವಿಯನ್ನು ರಥಾರೋಹಣ ಮಾಡಿಸಲಾಯಿತು. ರಥಾರೂಢಳಾಗಿ ಭಕ್ತರಿಗೆ ದರ್ಶನ ನೀಡುತ್ತಿರುವ ದೇವಿಯನ್ನು ನೋಡಲು ಅಪಾರ ಜನಸ್ತೋಮ ಕಣ್ತುಂಬಿಕೊಳ್ಳುತ್ತಿದೆ. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿಯ ಪರಾಕಾಷ್ಠತೆ ಮೆರೆದರು.