ಕಾರವಾರ: ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಆಡಳಿತ ಪಕ್ಷದ ಶಾಸಕ ಸತೀಶ್ ಸೈಲ್ ನಡುವಿನ ತೀವ್ರ ಜಟಾಪಟಿಗೆ ಸಾಕ್ಷಿಯಾಯಿತು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಆರಂಭವಾದ ಭಿನ್ನಾಭಿಪ್ರಾಯ, ಆರೋಗ್ಯ ಇಲಾಖೆಯ ಚರ್ಚೆಯ ಸಂದರ್ಭದಲ್ಲಿ ವಿಕೋಪಕ್ಕೆ ತಿರುಗಿ ಶಾಸಕರು ಸಭೆಯಿಂದ ಹೊರನಡೆದ ಘಟನೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಕೆಲವು ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದೆ ಎಂದು ಶಾಸಕ ಸತೀಶ್ ಸೈಲ್ ಗಂಭೀರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಡಿಎಚ್ಒ ಶಂಕರ ರಾವ್ ಅವರು ಸ್ಪಷ್ಟನೆ ನೀಡಲು ಮುಂದಾಗಿ, ಕೆಲವು ಕಡೆ ವೈದ್ಯರ ಕೊರತೆ ಇರಬಹುದು ಆದರೆ ಔಷಧಿಗಳ ಲಭ್ಯತೆ ಇದೆ ಎಂದು ಉತ್ತರಿಸಿದರು. ಇದನ್ನು ಬೆಂಬಲಿಸಿದ ಸಚಿವ ಮಂಕಾಳ ವೈದ್ಯ ಅವರು ಜಿಲ್ಲೆಯಲ್ಲಿ ಔಷಧಿ ಕೊರತೆ ಇಲ್ಲ ಎಂದು ಪ್ರತಿಪಾದಿಸಿದರು. ಈ ಸಮರ್ಥನೆಯಿಂದ ಕೆರಳಿದ ಶಾಸಕ ಸೈಲ್, ವಾಸ್ತವದಲ್ಲಿ ಔಷಧಿ ಕೊರತೆ ಇದೆ ಎಂದು ಏರಿದ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕರ ವರ್ತನೆಯಿಂದ ಆಕ್ರೋಶಗೊಂಡ ಸಚಿವರು, ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ ನಾವು ಮಾಡುತ್ತೇವೆ, ಸುಮ್ಮನೆ ಕುಳಿತುಕೊಳ್ಳಿ ಎಂದು ಗದರಿಸಿದರು. ಇದರಿಂದ ಮತ್ತಷ್ಟು ಹತಾಶರಾದ ಸತೀಶ್ ಸೈಲ್, "ನಾನು ಅಂಗೂಟಾ ಚಾಪ್ (ಅನಕ್ಷರಸ್ಥ) ಅಲ್ಲ" ಎಂದು ಗುಡುಗುತ್ತಾ ಸಭೆಯಿಂದ ಹೊರನಡೆದರು. ಆಡಳಿತ ಪಕ್ಷದ ಇಬ್ಬರು ಪ್ರಭಾವಿ ನಾಯಕರ ನಡುವಿನ ಈ ನೇರ ಸಂಘರ್ಷವನ್ನು ಕಂಡು ಸಭೆಯಲ್ಲಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಿಗ್ಭ್ರಮೆಗೊಂಡರು. ಆರೋಗ್ಯ ಇಲಾಖೆಯ ವಿಷಯಕ್ಕೂ ಮುನ್ನ, ಸಾರಿಗೆ ಬಸ್ಗಳ ಕೊರತೆ ಮತ್ತು ಹಳೆಯ ವಿದ್ಯುತ್ ತಂತಿಗಳ ಬದಲಾವಣೆ ಕುರಿತಾದ ಚರ್ಚೆಯಲ್ಲೂ ಸಚಿವರು ಮತ್ತು ಶಾಸಕರ ನಡುವೆ ಅಭಿಪ್ರಾಯ ಭೇದಗಳು ಕಂಡುಬಂದವು.