ಭಟ್ಕಳ: ರಾತ್ರೋರಾತ್ರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿಗೆ ಬೆಂಕಿ ಹಚ್ಚುವ ಮೂಲಕ ದುಷ್ಕರ್ಮಿಗಳು ದುಷ್ಕೃತ್ಯ ಮೆರೆದಿದ್ದಾರೆ.ತಾಲ್ಲೂಕಿನ ಭಟ್ಕಳದ ಕಟಗಾರಕೊಪ್ಪಾ ನಿವಾಸಿ ತುಳಸಿದಾಸ ಅಣ್ಣಪ್ಪ ನಾಯ್ಕ ಅವರ ಕಾರಿಗೆ ಬೆಂಕಿ ಹಚ್ಚಿದ್ದು ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಹಾನಿಯಾಗಿದೆ. ತುಳಸಿದಾಸ ತಮ್ಮ ಮಾರುತಿ ಸುಜುಕಿ ಕಂಪನಿಯ ಬ್ರೀಜಾ ಕಾರನ್ನು ಶಿರಾಲಿ ಗ್ರಾಮದ ಕೋಟೆ ಬಾಗಿಲು ರಸ್ತೆಯಲ್ಲಿ ನಿಲ್ಲಿಸಿದ್ದರು. ಮಧ್ಯರಾತ್ರಿಗೆ ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಾರಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ್ದಾರೆ ಎಂದು ತುಳಸಿದಾಸ ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.