ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎಥೆನಾಲ್ ತುಂಬಿದ ಟ್ಯಾಂಕರ್ ಲಾರಿ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಕಂಚಿನಬಾಗಿಲ ಬಳಿ ನಡೆದಿದೆ. ಬಾಗಲಕೋಟ ಮೂಲದ ಉದ್ಯಮಿಯೊಬ್ಬರಿಗೆ ಸಂಬಂಧಿಸಿದ ಲಾರಿ ಎಂದು ತಿಳಿದು ಬಂದಿದ್ದು ಯಲ್ಲಾಪುರ ಮಾರ್ಗದಿಂದ ಅಂಕೋಲಾ ಕಡೆಗೆ ಲಾರಿ ಚಲಿಸುತ್ತಿತ್ತು. ಕಂಚಿನ ಬಾಗಿಲ ಸಮೀಪದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಾರಿ ಪಟ್ಟಿಯಾಗಿರುವ ಸಾಧ್ಯತೆಯಿದ್ದು ಪಲ್ಟಿಯಾದ ತಕ್ಷಣ ಟ್ಯಾಂಕರ್ ಸ್ಪೋಟಿಸಿ ಬೆಂಕಿ ಹತ್ತಿ ಉರಿದಿದೆ. ಘಟನೆಯಲ್ಲಿ ಲಾರಿಯ ಚಾಲಕನಿಗೆ ಗಾಯಗಳಾಗಿದ್ದು ಅಂಕೋಲಾ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗೆ ರವಾನಿಸಲಾಗಿದೆ. ಅರ್ಧ ಗಂಟೆಗೂ ಅಧಿಕ ಅವಧಿಯಿಂದ ಎಥೇನಾಲ್ ತುಂಬಿದ ಲಾರಿ ಹೊತ್ತಿ ಉರಿಯುತ್ತಿದ್ದು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದರೂ ಒಂದೇ ವಾಹನ ಇರುವ ಕಾರಣ ಕಾರ್ಯಚರಣೆ ಫಲಪ್ರದವಾಗಿಲ್ಲ. ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿಯ ಅಂಕೋಲಾ ಯಲ್ಲಾಪುರ ಮಾರ್ಗದ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಅರಣ್ಯ ಪ್ರದೇಶಕ್ಕೂ ಬೆಂಕಿ ಆವರಿಸಿದೆ. ಡಿವೈಎಸ್ಪಿ ಗಿರೀಶ್ ಎಸ್ ವಿ, ತಹಸಿಲ್ದಾರ್ ನಿಶ್ಚಲ್ನರೋನ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮು ಗುನಗಿ, ಪಿಎಸ್ಐ ಗುರುನಾಥ ಹಾದಿಮನಿ, ಪೋಲಿಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಂಕಿಯ ತೀವ್ರತೆ ಮುಂದುವರೆದಿದ್ದು ಕಾರ್ಯಾಚರಣೆಗೆ ಇನ್ನಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.