ಶಿರಸಿ: ತಾಲೂಕಿನ ಶಿಂಗನಮನೆ ಗ್ರಾಮ ವ್ಯಾಪ್ತಿಯ ಕಾಡಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪರಮೇಶ್ವರ ತಿಮ್ಮ ನಾಯ್ಕ (32) ಮೃತ ವ್ಯಕ್ತಿಯಾಗಿದ್ದು, ಇಂದು ಬೆಳಗಿನ ಜಾವ ಶಿಂಗನಮನೆಯ ಕಾಡಿನಲ್ಲಿ ಶವ ಪತ್ತೆಯಾಗಿದೆ. ಮಾಹಿತಿಯಂತೆ, ನಿನ್ನೆ ಸಂಜೆ ಸುಮಾರು 7 ಗಂಟೆ ವೇಳೆಗೆ ಪರಮೇಶ್ವರ ಅವರಿಗೆ ಫೋನ್ ಕರೆ ಬಂದಿದ್ದು, ಬಳಿಕ ಅವರು ಮನೆಯಿಂದ ಹೊರಗಡೆ ತೆರಳಿದ್ದರು. ಆದರೆ ರಾತ್ರಿ ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಇಂದು ಬೆಳಿಗ್ಗೆ ಕಾಡಿನಲ್ಲಿ ಶವ ಕಂಡುಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪ್ರಾಥಮಿಕ ಮಾಹಿತಿಯ ಪ್ರಕಾರ ಮಾರಕಾಸ್ತ್ರಗಳಿಂದ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.